Sunday, March 23, 2014

ಸ್ಥಳ ಪುರಾಣ


ಸ್ಥಳ ಪುರಾಣ
ಲೇಖಕರ ಲೇಖಕನಿಯಿಂದ,
       ಭರತ ಖಂಡದ ಪುಣ್ಯಶಕ್ತಿ  ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೆಶ್ವರಿಯು ಲಿಂಗರೂಪಿಣಿಯಾಗಿ ನೆಲೆಸಿ ನಂಬಿದ ಭಕ್ತರನ್ನು ಬೆಂಬಿಡದೆ ಸಲಹುತ್ತಿರುವ ವಿಷಯ ಸರ್ವವಿದಿತ. ಕುಂದಾಪುರ-ತೀರ್ಥಹಳ್ಳಿ ರಾಜ್ಯಹೆದ್ದಾರಿಗೆ ಒಳಪಟ್ಟ ಸಿದ್ದಾಪುರದಿಂದ 6 ಕಿ.ಮೀ. ದೂರದ (ಸಿದ್ದಾಪುರ, ಹಳ್ಳಿಹೊಳೆ, ಜಡ್ಕಲ್ ಕೊಲ್ಲೂರು ರಸ್ತೆ) ಮಲೆನಾಡಿನ ಮೂಲೆಯಲ್ಲಿ, ತೆಂಗು ಕಂಗುಗಳ ಮಧ್ಯ ಪವಿತ್ರವಾದ ಪುಣ್ಯ ಕ್ಷೇತ್ರ ಕಮಲಶಿಲೆಯು ಕಂಗೊಳಿಸುತ್ತಿದೆ. ಕಮಲವು, ಶಿಲೆಯು ಒಂದಾಗಿ ಕಮಲಶಿಲೆಯಾಗಿ ದುಷ್ಟನಿಗ್ರಹ ಶಿಷ್ಟಪರಿಪಾಲನ ಕಾರ್ಯ ಇಲ್ಲಿ ನಡೆಯುತ್ತಿದೆ. ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಕಮಲಶಿಲೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುವ ಪ್ರಸಿದ್ದ ಕ್ಷೇತ್ರವಾಗಿದ್ದು ಭಕ್ತರು ಭಕ್ತಿ ಧ್ಯಾನದಿಂದ ಆರಾಧಿಸಿ ಹರಕೆ ಸಲ್ಲಿಸಿ ಭಕ್ತಿ ಪರವಶತೆಯಿಂದ ಪೂಜಿಸುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿದಾಗ ಕೃತಾರ್ಥರಾಗಿ ಧನ್ಯತಾ ಭಾವದಿಂದ ಹಿಂದಿರುಗುತ್ತಾರೆ. 

            ಪ್ರಾಕೃತಿಕವಾಗಿ  ವಿಶಿಷ್ಟ ಸ್ಥಾನವನ್ನು ಪಡೆದ ತಾಯಿಯು ಪ್ರಕೃತಿ ಪ್ರಿಯಳಾಗಿ ಇಲ್ಲಿ  ಹುಟ್ಟಿ ಬಂದಿದ್ದಾಳೆ. ಸುತ್ತಲೂ ದಟ್ಟವಾದ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಿಂದ ಉದ್ಭವಿಸಿ  ಲಿಂಗ ರೂಪಿಣಿಯಾಗಿ ನೆಲೆ ನಿಂತಿದ್ದಾಳೆ. ಹುಟ್ಟಿದ್ದು ನೀರಿನಲ್ಲಿ, ರೂಪ ಕಲ್ಲು, ಆಭರಣವೇ  ಮಣ್ಣು. ಇದರಿಂದ ಆ ತಾಯಿಯ ಅದ್ಭುತ ಶಕ್ತಿ ಏನೆಂಬುದರ ಅರಿವಾಗುತ್ತದೆ. ’ಬ್ರಾಹ್ಮೀ’ ಶಕ್ತಿಯ ಸಂಕೇತ, ಭಕ್ತಿಯ ಉಗಮ. ಪರಮೇಶ್ವರನ ಮಡದಿ ಆದಿ ಪರಮೇಶ್ವರಿಯಾಗಿ, ಜಗತ್ತಿಗೆ ಬಂದ ಕಷ್ಟಗಳ ಪರಿಹರಿಸುವ ದುರ್ಗೆಯಾಗಿ, ಬ್ರಹ್ಮಾಣೀ  ಶಕ್ತಿಯ ಐಕ್ಯವಾದ್ದರಿಂದ ನೆಲೆನಿಂತ  ಬ್ರಾಹ್ಮೀ ದುರ್ಗಾಪರಮೇಶ್ವರಿಯ  ಸನ್ನಿದಿ ಜಗತ್ತಿನ ಏಕೈಕ ಬ್ರಾಹ್ಮೀ ಕ್ಷೇತ್ರ ಇದಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ  ತ್ರಿಮೂರ್ತ್ಯಾತ್ಮಕ, ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ  ಸ್ವರೂಪಿಣಿಯಾಗಿ ತ್ರಿಶಕ್ತ್ಯಾತ್ಮಕವಾದ ಅದ್ಭುತ ಶಕ್ತಿ ಕಮಲಶಿಲೆಯಲ್ಲಡಗಿದೆ.  ಪೂಜನೀಯ ದಿವಂಗತ ಕಮಲಶಿಲೆ ಸೀತಾರಾಮ ಭಟ್ಟರು 1976ರಲ್ಲಿ  ರಚಿಸಿದ “ಶ್ರೀ ಕಮಲಶಿಲೆ ಕ್ಷೇತ್ರ ಮಹಾತ್ಮೈ”ಹೂತ್ತಗೆಯ ಆಧಾರದಲ್ಲಿ ಈ ಕೃತಿಯನ್ನು ರಚಿಸಲಾಗಿದೆ.
 ಕಮಲಶಿಲೆ ಶ್ರೀಧರ ಅಡಿಗ.

                                                ಲೇ:  ಕಮಲಶಿಲೆ ಶ್ರೀಧರ ಅಡಿಗ.


“ಕಮಲಶಿಲೆ ಸ್ಥಳ ಪುರಾಣ” ಹೊತ್ತಗೆಯ ಸಂಪೂರ್ಣ ಲೇಖನವನ್ನು ಒಂದೊಂದಾಗಿ  ಈ ಮುಂದೆ ಪ್ರಕಟಿಸಲಾಗುವುದು...

No comments:

Post a Comment