Sunday, January 1, 2017

ಸ್ಥಳ ಪುರಾಣ,

                                 ಕುಬ್ಜಾ ನದಿ  
ಭಾಗ 2 :
  ಪಾರ್ವತಿಯು ಶಾಪಕ್ಕೆ ನೀಡಿದ ವಿಮೋಚನಾ ದಾರಿಯೂ  ‘ಪಿಂಗಲೆಯೇ  ನಿನ್ನ ತಪಸ್ಸಿಗೆ ಮೆಚ್ಚಿರುತ್ತೇನೆ.ನೀನು ಈಗ ಮಧುರೆಗೆ ಹೋಗು. ಅಲ್ಲಿ ಶ್ರೀ ಕೃಷ್ಣ ಪರಮಾತ್ಮನು ಕಂಸನ  ವಧೆಗಾಗಿ ಬರುತ್ತಾನೆ. ನೀನು ಮಧುರೆಯಲ್ಲಿ ಮಾನೆ ಮಾಡಿಕೊಂಡು  ಕೃಷ್ಣನ ದರ್ಶನಕ್ಕೆ ಕಾದಿರು. ಶ್ರೀ ಕೃಷ್ಣನ ದರ್ಶನ, ಆಲಿಂಗನದಿಂದ  ನಿನ್ನ ಕುಬ್ಜತ್ವವು ನಿವಾರಣೆಯಾಗಿ ಮೊದಲಿನ ರೂಪವನ್ನು ಹೊಂದಿ ಕೈಲಾಸವನ್ನು ಸೇರುತ್ತಿ. ನೀನು ತಪಸ್ಸು ಮಾಡಿದ ಈ ಪ್ರದೇಶದ ಸಹ್ಯ ಪರ್ವತದಲ್ಲಿ ಹುಟ್ಟಿ ಪಶ್ಚಿಮಾಂಬುಧಿಯನ್ನು  ಸೇರುವ ಈ ನದಿಯು ‘ಕುಬ್ಜ ನದಿ’ಯಾಗಲಿ. ಆ ಚಂದ್ರಾರ್ಕವಾಗಿ ನಿನ್ನ ಹೆಸರು ಬೆಳಗಲಿ. ನಿನ್ನ ಕೋರಿಕೆಯಂತೆ ವರ್ಷಕೊಮ್ಮೆ ನೀನಾಗಿಯೇ ಉಕ್ಕಿ ಬಂದು ನನ್ನನ್ನು ಸ್ನಾನ ಮಾಡಿಸುವ ಪುಣ್ಯ ಅವಕಾಶವನ್ನು ನಿನಗೆ ಕರುಣಿಸಿದ್ದೇನೆ. ಯಾರು ಈ ನದಿಯಲ್ಲಿ ಸ್ನಾನಮಾಡಿ ನನ್ನನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರಿಗೆ ಸಕಲವಿದವಾದ ಸಂಪತ್ತು ದೊರೆಯುತ್ತದೆ.ಶರತ್ಕಾಲದಲ್ಲಿ ವಿಶೇಷವಾದ ಹೋಮ ಹವನಗಳು ಸುವಾಸಿನೀ ಬ್ರಾಹ್ಮಣ ಸಂತರ್ಪಣೆ ಭಕ್ಷ್ಯಬ್ಹೊಜ್ಯಾದಿ  ನೈವಿದ್ಯಗಳಿಂದ  ಭಕ್ತಿಪೂರ್ವಕವಾಗಿ ಯಾರು ನನ್ನನ್ನು ಪೂಜಿಸುತ್ತಾರೋ ಅವರಿಗೆ ಸಂಪೂರ್ಣ ಅನುಗ್ರಹವನ್ನು ನೀಯುತ್ತೇನೆ. ನೀನು ಮಧುರೆಗೆ ಹೋಗು’ ಎಂಬುದಾಗಿ ಪಾರ್ವತಿಯು ವಚನವೀಯುತ್ತಾಳೆ.
       ದೇವಿಯಿಂದ ವರಪಡೆದ ಕುಬ್ಜೆಯು ಮಧುರೆಗೆ ಬಂದು ತನಗಾಗಿ ಒಂದು ಮನೆಯನ್ನು ಕಟ್ಟಿಕೊಂಡು ಶ್ರೀ ದೇವಿಯನ್ನು  ಧ್ಯಾನಿಸುತ್ತಾ ಕೃಷ್ಣನ ಆಗಮನಕ್ಕಾಗಿ ಕಾಯುತ್ತಿದ್ದಳು. ಕಂಸನಿಗೆ ಸುಗಂಧ ದ್ರವ್ಯಗಳನ್ನು ಸಾಗಿಸುವ ಕೆಲಸದಲ್ಲಿ ನಿರತಳಾಗಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಕಾತರಲಾಗಿರುತ್ತಾಳೆ. ಕಂಸನ ವಧೆಗಾಗಿ ಶ್ರೀ ಕೃಷ್ಣ ಬಲರಾಮರು ಬರುವಾಗ ದಾರಿಯಲ್ಲಿ ಕುಬ್ಜೆ  ಸಿಗುತ್ತಾಳೆ. ಶ್ರೀಕೃಷ್ಣ ದರ್ಶನಾದಿಂದ ಆನಂದ ಭರಿತಳಾಗಿ ತನ್ನ ಮನೆಗೆ ಆಹ್ವಾನಿಸಿ  ನಡೆದ ವೃತ್ತಾಂತವನ್ನೆಲ್ಲ ವಿವರಿಸುತ್ತಾಳೆ. ಶ್ರೀ ಕೃಷ್ಣನ ಆಲಿಂಗನದಿಂದ ಅವಳ ಶಾಪ ವಿಮೂಚನೆಯಾಗಿ ಕುಬ್ಜತ್ವ ನಿವಾರಣೆಯಾಗುತ್ತದೆ.ಅತ್ಯಂತ ಸುಂದರಿಯಾಗಿ ಮೊದಲಿನ ರೂಪವನ್ನು ಪಡೆಯುತ್ತಾಳೆ. ಶ್ರೀ ಕೃಷ್ಣಪರಮಾತ್ಮನಿಗೆ
ಸಾಷ್ಟಾಂಗ ನಮಸ್ಕರಿಸಿ ಪುನಃ ರೈಕ್ವಾಶ್ರಮಕ್ಕೆ ಬಂದು ಶ್ರೀ ಬ್ರಾಹ್ಮೀ ದುರ್ಗಾಂಬೆಯನ್ನು  ಸ್ತುತಿಸಿ ಕೈಲಾಸಕ್ಕೆ ಹೋಗುತ್ತಾಳೆ.

           ಹೀಗೆ ಕುಬ್ಜಾ ನದಿಯು ಪಂಚನದಿಗಳಲ್ಲಿ ಒಂದಾಗಿ  ಪಂಚಾಗಂಗಾವಳಿ(ಕುಬ್ಜಾ, ಕೇಟಕೀ,ವಾರಾಹಿ, ಸೌಪರ್ಣಿಕಾ, ಚಕ್ರಾ)ಯಲ್ಲಿ ಪಶ್ಚಿಮಾಂಬುಧಿಯನ್ನು ಸೇರುತ್ತದೆ. ಪ್ರತೀ ವರ್ಷವೊಮ್ಮೆಯಾದರೂ ಕುಬ್ಜಾ ನದಿಯೂ ಉಕ್ಕಿ ಹೆಬ್ಬಾಗಿಲಿನಿಂದ ಒಳ ಪ್ರವೇಶಿಸಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿಯನ್ನು ಅಭ್ಯಂಜನ ಮಾಡಿಸುವ ಪರಿಪಾಟವಿದೆ. ಈ ನದಿಯೂ ಎಲ್ಲಿಯೂ ನೇರವಾಗಿ ಹರಿಯದೆ ಅಂಕುಡೊಂಕಾಗಿ ಹರಿಯುತ್ತಿರುತ್ತದೆ.ಇಲ್ಲಿ “ಕುಬ್ಜಾ”  ಎಂಬ ಹೆಸರು ಅನ್ವರ್ಥಕವಾಗಿದೆ. 

No comments:

Post a Comment